ಕನ್ನಡ ನೆಲದಲ್ಲಿ ಹುಟ್ಟಿ ಬೆಳೆದು ವಿದೇಶದಲ್ಲಿ ನೆಲೆಸಿರುವ ಪ್ರತಿಭಾವಂತ ಹೆಣ್ಣುಮಗಳು ಯಾನಾರಾಜ್. ಸದ್ಯ ಯಾನಾ ರಾಜ್ ವಿದೇಶದಲ್ಲಿ ವೃತ್ತಿ ನಿರ್ವಹಿಸುತ್ತಾ ಜೊತೆಗೆ ಅನೇಕ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುತ್ತಾ ಬರುತ್ತಿದ್ದಾರೆ. ಯಾನಾ ರಾಜ್ ಹಾಗೂ ಅವರ ತಂದೆ ಎಸ್ ನಾಗರಾಜ್ ಅವರ ಪ್ರಥಮ ಸಿನಿಮಾ ಪ್ರಯತ್ನ ‘ವೈಷ್ಣವಿ’. ಕಲಾ ನಿರ್ದೇಶಕರಾಗಿ ಸಾಕಷ್ಟು ಸಿನಿಮಾಗಳಿಗೆ ಕಾರ್ಯ ನಿರ್ವಹಿಸುತ್ತಾ, ಜೊತೆ ಜೊತೆಗೆ ಚಿತ್ರ ನಿರ್ದೇಶನವನ್ನೂ ಆರಂಭಿಸಿ, ತಮ್ಮದೇ ಆದ ವಿಶಿಷ್ಟ ಚಿತ್ರಗಳಮೂಲಕ ಹೆಸರು ಮಾಡಿರುವವರು ಜಿ ಮೂರ್ತಿ. ಅವರ ನಿರ್ದೇಶನದ ‘ವೈಷ್ಣವಿ’ ಚಿತ್ರವನ್ನು ಕನ್ನಡ ರಂಗದ ಡಾ. ಅಂಬರೀಶ್, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ವಿನಯಪ್ರಕಾಶ್, ರಮೇಶ್ ಭಟ್ ಹಾಗೂ ಇನ್ನಿತರರಿಂದ ಅಪಾರ ಮೆಚ್ಚುಗೆ ಪಡೆದಿದೆ. ಈ ಚಿತ್ರ ಈಗ ಅಮೆರಿಕ ದೇಶದಲ್ಲಿ ಪ್ರದರ್ಶನಗೊಂಡು ಚಿತ್ರದ ಕಥಾವಸ್ತು ಹಾಗೂ ಬೋಲ್ಡ್ ಅಟೆಂಪ್ಟ್ ಬಗ್ಗೆ ಪ್ರಶಂಸೆ ಪಡೆದಿದೆ.
ಇದೇ ತಿಂಗಳ ೫ ಹಾಗೂ ೬ ರಂದು ಅಮೆರಿಕ ದೇಶದ ಚಾರ್ಲೊಟ್ ಆಯಿರ್ಸ್ಲೆಯ್ ಗ್ರಾಂಡ್ ಸಿನಿಮಾಸ್ ಚಿತ್ರಮಂದಿರದಲ್ಲಿ ‘ವೈಷ್ಣವಿ’ ಚಿತ್ರ ಪ್ರದರ್ಶವಾಗಿದೆ. ಇದು ಜಿ ಮೂರ್ತಿ ಅವರ ವಿಭಿನ್ನ ಕಥಾವಸ್ತುವಿನ ಸಿನಿಮಾ. ಈ ಚಿತ್ರಕ್ಕಾಗಿ ಪ್ರವೀಣ್ ಗೋಡ್ಕಿಂಡಿ ಐದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಸಮಾಜವನ್ನು ಭೂತದಂತೆ ಕಾಡುತ್ತಿರುವ ‘ಧರ್ಮ’ ಇಲ್ಲಿ ಚರ್ಚೆಯ ವಸ್ತುವಾಗಿದೆ. ವಿದೇಶದಿಂದ ಬಂದ ಹೆಣ್ಣು ಮಗಳೊಬ್ಬಳು ದಿಟ್ಟತನದಿಂದ ನಿಂತು ಹೆತ್ತವರಿಗಾಗಿ ಕ್ರಿಯಾ-ಕರ್ಮಗಳನ್ನು ಮಾಡುವುದು ಈ ಸಿನಿಮಾದ ಮತ್ತೊಂದು ಪ್ರಮುಖ ಅಂಶ.
ಒಟ್ಟಾರೆಯಾಗಿ, ಯಾನಾ ರಾಜ್ ಅವರ ಮೊದಲ ಪ್ರಯತ್ನ ಈಗ ಬಹಳಷ್ಟು ಮೆಚ್ಚುಗೆ ಹಾಗೂ ಪ್ರೋತ್ಸಾಹವನ್ನು ಗಳಿಸಿಕೊಂಡಿದೆ. ಸದದಲ್ಲೇ ಬಿಡುಗಡೆ ಬಗ್ಗೆ ನಿರ್ದೇಶಕ ಜಿ ಮೂರ್ತಿ ಅವರು ಚಿಂತನೆ ನಡೆಸುತ್ತಿದ್ದಾರೆ.